ಕೊಪ್ಪಳ(www.thenewzmirror.com):ಕರಾವಳಿ ಭಾಗದಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡಬೇಕು. ತಪ್ಪು ಮಾಡಿದವರನ್ನು ಬಂಧಿಸಲಿ. ಆದರೆ, ವಿನಾಕಾರಣ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದು ಖಂಡಿತ ಸರಿಯಲ್ಲ ಎಂದು ತಿಳಿಸಿದರು. ಇಂಥ ನಡವಳಿಕೆಯಿಂದ ವಾತಾವರಣ ತಿಳಿ ಆಗುವುದಿಲ್ಲ; ಬದಲಾಗಿ ವಾತಾವರಣ ಇನ್ನಷ್ಟು ಹದಗೆಡಲಿದೆ. ಇದಕ್ಕೆ ರಾಜ್ಯ ಸರಕಾರವು ಹೊಣೆ ಹೊರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಎಚ್ಚರಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು,ರಾಜ್ಯ ಸರಕಾರವು ಕೆಲವರನ್ನು ಓಲೈಸಲು, ಖುಷಿ ಪಡಿಸಲು ಹಿಂದೂ ಕಾರ್ಯಕರ್ತರ ಮೇಲೆ ಬೆದರಿಕೆ ಒಡ್ಡುವುದು ಖಂಡಿತ ಸರಿಯಲ್ಲ, ತಪ್ಪಿತಸ್ಥರನ್ನು ಹುಡುಕುವ ನೆಪದಲ್ಲಿ ಹಿಂದೂ ಕಾರ್ಯಕರ್ತರನ್ನು, ಪರಿವಾರದ ಮುಖಂಡರನ್ನು ಟಾರ್ಗೆಟ್ ಮಾಡದಿರಿ,ಇಲ್ಲವಾದರೆ ಮುಂದಿನ ಬೆಳವಣಿಗೆಗೆ ರಾಜ್ಯ ಸರಕಾರವೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು
ಎಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ತಿಳಿಸಿದರು.
ಕರಾವಳಿ ಭಾಗದಲ್ಲಿ ಇತ್ತೀಚೆಗೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ನಡೆದಿತ್ತು. ನಂತರ ಒಬ್ಬ ಮುಸಲ್ಮಾನನ ಹತ್ಯೆಯೂ ಆಗಿದೆ. ಆದರೆ, ಇದೆಲ್ಲದರ ನಡುವೆ ರಾಜ್ಯ ಸರಕಾರ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದೇ, ಕಾನೂನು- ಸುವ್ಯವಸ್ಥೆ ಸರಿಪಡಿಸುವ ನೆಪ ಮಾಡಿಕೊಂಡು ಪೊಲೀಸ್ ಇಲಾಖೆ, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕರಾವಳಿ ಭಾಗದಲ್ಲಿ ಸರಕಾರವು ಪೊಲೀಸ್ ಇಲಾಖೆ ಮೂಲಕ ಹಿಂದೂ ಕಾರ್ಯಕರ್ತರ ಬಂಧನ, ಹಿಂದೂ ಮುಖಂಡರ ಮೇಲೆ ಕೇಸ್ ಹಾಕುವ ಮೂಲಕ ಪ್ರಚೋದನೆಯ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ನಮ್ಮ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಮಧ್ಯರಾತ್ರಿ ತೆರಳಿ ವಿಚಾರಣೆ ಮಾಡುತ್ತಿದ್ದಾರೆ.
ಸ್ಪಷ್ಟನೆ ಕೇಳಲು ಅವರು ಯಾರು?
ಯುದ್ಧದ ನಷ್ಟ ಕುರಿತು ಪ್ರಧಾನಿಯವರು ಸ್ಪಷ್ಟನೆ ಕೊಡಬೇಕು ಎಂಬ ಸಚಿವ ಪ್ರಿಯಾಂಕ್ ಖರ್ಗೆಯವರ ಆಗ್ರಹ ಕುರಿತ ಪ್ರಶ್ನೆಗೆ ಉತ್ತರಿಸಿ, ಸ್ಪಷ್ಟನೆ ಕೇಳಲು ಅವರು ಯಾರು? ಎಂದು ಕೇಳಿದರು. ಆಪರೇಷನ್ ಸಿಂದೂರ ಯಶಸ್ಸಿನ ವಿಷಯವನ್ನು ದೇಶದ ಜನರು ನೋಡಿದ್ದಾರೆ. ಅವರು ತಮ್ಮ ಇಲಾಖೆಯನ್ನು ಸರಿಯಾಗಿ ನಿರ್ವಹಿಸಲಿ. ಜಗತ್ತು, ದೇಶದ ಬಗ್ಗೆ ಮಾತನಾಡುವುದನ್ನು ಬಿಡಲಿ ಎಂದು ಒತ್ತಾಯಿಸಿದರು.
ಮಳೆಗಾಲದಲ್ಲಿ ಟಿಬಿ ಡ್ಯಾಮಿನ 19ನೇ ಕ್ರಸ್ಟ್ ಗೇಟ್ ಮುರಿದಿತ್ತು. 40-42 ಟಿಎಂಸಿ ನೀರು ವ್ಯರ್ಥವಾಗಿ ಹರಿದುಹೋಗಿತ್ತು. ಅದನ್ನು ಸರಿಪಡಿಸುವುದಾಗಿ ಮುಖ್ಯಮಂತ್ರಿ ಮತ್ತು ಉಸ್ತುವಾರಿ ಸಚಿವರು ಭರವಸೆ ಕೊಟ್ಟಿದ್ದರು. ಒಳಹರಿವು ಹೆಚ್ಚಾಗಿದ್ದರೂ ಗೇಟ್ ಸರಿಪಡಿಸಿಲ್ಲ; ಜಗತ್ತು, ದೇಶದ ಬಗ್ಗೆ ಮಾತನಾಡುವುದನ್ನು ಬಿಡಲಿ; ಅದೆಲ್ಲದಕ್ಕೂ ಪ್ರಧಾನಿಯವರು, ಗೃಹ ಸಚಿವರು, ರಕ್ಷಣಾ ಸಚಿವರಿದ್ದಾರೆ. ಅಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿದ್ದಾರೆ ಎಂದು ತಿಳಿಸಿದರು.
ನಟ ಕಮಲ್ಹಾಸನ್ ಅವರಿಗೆ ತಮಿಳಿನ ಬಗ್ಗೆ ಅಪಾರ ಪ್ರೀತಿ, ಗೌರವ ಇರಬಹುದು. ಸಾವಿರಾರು ವರ್ಷಗಳ ಇತಿಹಾಸ ಇರುವ ನಮ್ಮ ಕನ್ನಡ ಭಾಷೆ ಬಗ್ಗೆ ಮಾಹಿತಿ ಪಡೆಯದೆ ಹೇಳಿಕೆ ನೀಡುವುದು ಖಂಡಿತ ಸರಿಯಲ್ಲ ಎಂದು ನುಡಿದರು. ಅವರು ಕ್ಷಮಾಪಣೆ ಕೇಳಬೇಕಿತ್ತು. ಮಾಹಿತಿ ಕೊರತೆಯಿಂದ ಇಂಥ ಹೇಳಿಕೆ ಕೊಟ್ಟಿದ್ದಾರೋ ಅಥವಾ ಇನ್ಯಾರಿಗೋ ಖುಷಿಪಡಿಸಲು ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು. ಕನ್ನಡ ಭಾಷೆ, ನೆಲ, ಜಲದ ವಿಚಾರದಲ್ಲಿ ಅರ್ಥ ಇಲ್ಲದೆ ಹೇಳಿಕೆ ಕೊಟ್ಟರೆ ಕ್ಷಮಿಸುವ ಪ್ರಶ್ನೆ ಇಲ್ಲ ಎಂದು ಹೇಳಿದರು.