ಬೆಂಗಳೂರು(www.thenewzmirror.com): ಶ್ರೀಘ್ರದಲ್ಲೇ ಮುಖ್ಯಮಂತ್ರಿಗಳಿಂದ ಕಾಸರಗೋಡು ಡಾ.ಕಯ್ಯಾರ ಕಿಞ್ಞಣ್ಣರೈ ಕನ್ನಡ ಭವನ ಲೋಕಾರ್ಪಣೆ ಮಾಡಲಾಗುವುದು ಎಂದು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಸೋಮಣ್ಣ ಬೇವಿನಮರದ ತಿಳಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಹಾಗೂ ಗಡಿನಾಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡಮಿ, ಕಾಸರಗೊಡು, ಕಲ್ಕೂರ, ಪ್ರತಿಷ್ಠಾನ, ಮಂಗಳೂರು ಗ್ರೀನ್ ಸ್ಮಾರ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಕಯ್ಯಾರ್ 16ನೇ ವಾರ್ಡ್ ಕಯ್ಯಾರ ಕುಟುಂಬ ಶ್ರೀ ಘಟಕಗಳ ಸಹಯೋಗದಲ್ಲಿ ಇಂದು ಕೇರಳದ ಕಾಸರಗೋಡಿನ ಕಯ್ಯಾರ್ ಜೋಡುಕಲ್ಲು ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ನಾಡೋಜ ಡಾ.ಕಯ್ಯಾರ ಕಿಞ್ಞಣ್ಮರೆ 110ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಸೋಮಣ್ಣ ಬೇವಿನಮರದ ಅವರು
ಕಾಸರಗೋಡು ಡಾ.ಕಯ್ಯಾರ ಕಿಞ್ಞಣ್ಣರೈ ಕನ್ನಡ ಭವನದ ಕುರಿತು ಮಾಹಿತಿ ನೀಡಿದರು, ಲೋಕಾರ್ಪಣೆ ದಿನ ನಿಗದಿ ಬಾಕಿ ಇದೆ, ಅಂತಿಮ ಹಂತದ ಸಿದ್ದತೆ ನಂತರ ಲೋಕಾರ್ಪಣೆಗೊಳಿಸಲಾಗುತ್ತದೆ ಎಂದರು.
ನಂತರದಲ್ಲಿ ಕಾಸರಗೋಡು ಜಿಲ್ಲಾಧಿಕಾರಿಗಳಾದ ಕೆ. ಇಂಬಶೇಖರ್ ಅವರನ್ನು ಕಾಸರಗೋಡು ಶಾಸಕರಾದ ಎನ್. ಎ. ನೆಲ್ಲಿಕುನ್ನು ಇವರೊಂದಿಗೆ ಭೇಟಿ ಮಾಡಿ ಕಯ್ಯಾರ ಕಿಞ್ಞಣ್ಣರೈ ಕನ್ನಡ ಭವನಕ್ಕೆ ಮುಖ್ಯ ರಸ್ತೆಯಿಂದ ಹೋಗುವ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಲು ಕೋರಲಾಯಿತು. ಹೊಸದಾಗಿ ನಿರ್ಮಾಣವಾದ ತಳಪತಿ-ತಿರುವನಂತಪುರಂ ರಾಷ್ಟ್ರೀಯ ಹೆದ್ದಾರಿ ಕಾಸರಗೋಡು ಇಲ್ಲಿ ಬರುವ ಕನ್ನಡ ಪ್ರದೇಶಗಳ ಸ್ಥಳ ನಾಮಗಳನ್ನು, ನಾಮಫಲಕಗಳಲ್ಲಿ, ಇಂಗ್ಲೀಷ್, ಹಿಂದಿ, ಮಲಯಾಳಿ, ಜೊತೆಗೆ ಕನ್ನಡದಲ್ಲಿಯೂ ಕೂಡಾ ಹಾಕುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಬಗ್ಗೆ ಭಾರತ ಸರ್ಕಾರದ ಭಾಷಾ ಅಲ್ಪ ಸಂಖ್ಯಾತರ ಇಲಾಖೆಯವರು 2025ನೇ ಜೂನ್ 13 ರಂದು ಬರೆದ ಪತ್ರದ ಪ್ರತಿಯನ್ನು ಕೂಡಾ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು, ಅಲ್ಲದೆ, ಕಾಸರಗೋಡು ಜಿಲ್ಲೆಯ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಕೂಡ ಕಡ್ಡಾಯವಾಗಿ ಕನ್ನಡದ ನಾಮಫಲಕಗಳನ್ನು ಅಳವಡಿಸಲು ಕೋರಲಾಯಿತು.
ಇದಕ್ಕೆ ಜಿಲ್ಲಾಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿ ತಕ್ಷಣ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ನಂತರ ಕಾಸರಗೋಡು ಬದಿಯಡ್ಕದಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಭವನ ನಿರ್ಮಾಣದ ಅಂತಿಮ ಕಟ್ಟಡದ ಪ್ರಗತಿಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾಸರಗೋಡಿನ ಮಾನ್ಯ ವಿಧಾನಸಭೆ ಸದಸ್ಯರಾದ ಎನ್. ಎ. ನೆಲ್ಲಿಕುನ್ನು, ಹಾಗೂ ಬದಿಯಡ್ಕದ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಮಾಹಿಲ್ ಕೆಲೋಟ್ ರವರು ಉಪಸ್ಥಿತರಿದ್ದರು.