ಬೆಂಗಳೂರು(www.thenewzmirror.com):ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ರೈತರಿಗೆ ಅನ್ಯಾಯ ಮಾಡಿ ತೆಲಂಗಾಣಕ್ಕೆ ನೀರು ಕೊಡುತ್ತಿದ್ದಾರೆ ಎಂದು ಮಾಜಿ ಶಾಸಕ ರಾಜುಗೌಡ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ನೀತಿ ಖಂಡಿಸಿ ರೈತರು ಈಗಾಗಲೇ ಉಗ್ರ ಹೋರಾಟ ಮಾಡಿದ್ದೇವೆ. ಮುಖ್ಯಮಂತ್ರಿಗಳು, ಸಚಿವರು ನಮ್ಮ ಜನರಿಗೆ ಅನ್ಯಾಯ ಮಾಡಬಾರದು. ಸಾವಿರಾರು ಜನರ ಆತ್ಮಹತ್ಯೆ ತಡೆಯುವ ದೃಷ್ಟಿಯಿಂದ ಏ. 15ರವರೆಗೆ ನೀರು ಹರಿಸಬೇಕು ಎಂದು ಅವರು ಆಗ್ರಹಿಸಿದರು.
ಫೆಬ್ರವರಿ 20ರಿಂದ 5 ದಿನಗಳ ಕಾಲ 4 ಅಣೆಕಟ್ಟುಗಳಿಂದ ರಾಜ್ಯ ಸರಕಾರವು ನಿರಂತರವಾಗಿ ತೆಲಂಗಾಣಕ್ಕೆ ನೀರು ಹರಿಸಿದೆ. ಫೆ.2ರಂದು ತೆಲಂಗಾಣದಿಂದ ಮೂವರು ಸಚಿವರು, ಐದು ಜನ ಶಾಸಕರು ಬಂದು 10 ಟಿಎಂಸಿ ನೀರು ಬಿಡಲು ಮನವಿ ಮಾಡಿದ್ದರು ಎಂದು ವಿವರಿಸಿದರು.
ಮಾರ್ಚ್ 14ರಂದು ಐಸಿಸಿ ಸಭೆ ಮಾಡಿದ್ದು, ನಾರಾಯಣಪುರ ಎಡದಂಡೆ ಮತ್ತು ಬಲದಂಡೆ ಕಾಲುವೆ ವ್ಯಾಪ್ತಿಯ ರೈತರಿಗೆ ಮಾರ್ಚ್ 22ರತನಕ ನೀರು ಕೊಟ್ಟು ವಾರ ಬಂದ್ ಮಾಡಿ ಏ. 2ರಿಂದ 6ರವರೆಗೆ ನೀರು ಕೊಡುವುದಾಗಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಿದ್ದರು. ತೀರ್ಮಾನ ಮಾಡಿ ಎರಡೇ ದಿನಕ್ಕೆ ಡಿ.ಸಿ.ಗಳ ಜೊತೆ ಮಾತನಾಡಿದ್ದಾರೆ.ಹಿಂದಿನ ಆದೇಶ ರದ್ದು ಮಾಡಿ 23ರಿಂದ 25ರವರೆಗೆ ನೀರು ಹರಿಸುವುದಾಗಿ ಸಚಿವ ತಿಮ್ಮಾಪುರ ಅವರು ಹೇಳಿಕೆ ನೀಡಿದ್ದಾರೆ. ನಮ್ಮ ರೈತರಿಗೆ ಇವತ್ತು ಸಮಸ್ಯೆ ಆಗಿದೆ. ಸೂರ್ಯಕಾಂತಿ, ಶೇಂಗಾ, ಹತ್ತಿ, ಸಜ್ಜೆ, ಭತ್ತ ಬೆಳೆಗಾರರು ಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.
ಇಬ್ಬರು ರೈತರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಇದು ರೈತ ವಿರೋಧಿ ನೀತಿ.ಆಲಮಟ್ಟಿಗೆ ಸಂಬಂಧಿಸಿ 1ರಿಂದ 6ನೇ ತಾರೀಕಿನ ವರೆಗೆ ನೀರು ಕೊಡುತ್ತಿದ್ದಾರೆ. ನಾರಾಯಣಪುರ ಡ್ಯಾಮಿಗೆ ಸಂಬಂಧಿಸಿ ನೀರು ಕೊಡುತ್ತಿಲ್ಲ. ಮನವಿ ಮಾಡಿದರೆ ಕುಡಿಯಲು ನೀರಿಲ್ಲ ಎನ್ನುತ್ತಾರೆ. ಹಾಗಿದ್ದರೆ ತೆಲಂಗಾಣಕ್ಕೆ 10 ಟಿಎಂಸಿ ನೀರು ಹೇಗೆ ಬಿಟ್ಟರು ಎಂದು ಪ್ರಶ್ನಿಸಿದರು.