ಬೆಂಗಳೂರು, (www.thenewzmirror.com);
ನಮ್ಮ ದೇಶದಲ್ಲಿ ಗಾಂಧೀಜಿಯವರನ್ನು ಕೊಂದವರನ್ನು ಪೂಜಿಸುವ ವ್ಯವಸ್ಥೆ ನಿರ್ಮಾಣವಾಗಿರುವುದು ದೇಶಕ್ಕೆ ಮಾರಕ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಗಂರವರು ರಚಿಸಿದ ‘ಗಾಂಧಿ : ದ ಲಾಸ್ಟ್ ಡೇಸ್’ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಗಾಂಧೀಜಿ ತಮ್ಮ ಜೀವನದುದ್ದಕ್ಕೂ ಅಹಿಂಸೆಯ ಪರಮಧರ್ಮ ಎಂದು ಬದುಕಿದವರು,ಅವರ ಕಾಲ ಧೂಳಿಗೂ ಸಮವಲ್ಲದವರು ಇಂದು ಗಾಂಧೀಜಿಯವರನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ. ಗಾಂಧೀಜಿ ಭೂಮಿ ಮೇಲೆ ಹುಟ್ಟಿದ ಮಹಾತಪಸ್ವಿ ಎಂದು ಐನ್ ಸ್ಟೈನ್ ನಂತಹ ಮಹಾನ್ ವಿಜ್ಞಾನಿಗಳು ಕೊಂಡಾಡಿದ್ದಾರೆ, ಗಾಂಧೀಜಿಯವರು ತತ್ವ,ಆದರ್ಶ, ಚಿಂತನೆಗಳು ಸರ್ವವ್ಯಾಪಿಯಾದುದು ಮತ್ತು ಸಕಲ ಕಾಲಕ್ಕೂ ಒಪ್ಪುವಂತದ್ದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕುಲಸಚಿವ ಶೇಕ್ ಲತೀಫ್ ಮಾತನಾಡಿ, ಗಾಂಧೀಜಿಯವರ ಸರಳತೆ, ಜೀವನಪದ್ದತಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಹಾಗೆನೇ ಗಾಂಧೀ ಸತ್ಯ,ನಿಷ್ಠೆಯನ್ನು ಅಳವಡಿಸಿಕೊಳ್ಳುವುದರ ಜತೆಗೆ ಗಾಂಧೀಜಿಯವರು ಮೌಲ್ಯಧಾರಿತ ಜೀವನ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಬೇಕು” ಎಂದು ತಿಳಿಸಿದರು.
ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ಶ್ರೀಕೀರ್ತಿ ಬಿ.ಎನ್. ಮಾತನಾಡಿ, ಗಾಂಧೀಜಿಯವರ ತತ್ವ,ಆದರ್ಶಗಳನ್ನು ತಮಗೆಬೇಕಾದಂತೆ ಪ್ರಸ್ತುತಪಡಿಸುವ ಅವಲೋಕಿಸುವ ಪ್ರಯತ್ನಗಳು ನಡೆಯುತ್ತಿದೆ. ಗಾಂಧೀಜಿ ಕೇವಲ ವ್ಯಕ್ತಿಯಲ್ಲ, ಈ ದೇಶದ ಶಕ್ತಿ.ದೇಶದ ಅಸ್ಮಿತೆಯ ಸಂಕೇತವಾಗಿ ಶಾಂತಿ, ಸಹಬಾಳ್ವೆ, ಸರ್ವಧರ್ಮ ಸಹಿಷ್ಣುತೆಯ ಬಗ್ಗೆ ಸಂದೇಶ ನೀಡಿದ ಮಹಾನ್ ಸಂತ ಎಂದು ನೆನಪಿಸಿಕೊಂಡರು.
ಕನ್ನಡ ಪ್ರಾಧ್ಯಾಪಕಿ ಡಾ.ಮೀರಾ ಎಲ್.ಜಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ ಪ್ರಕಾಶಮೂರ್ತಿ, ಕನ್ನಡ ಪರ ಹೋರಾಟಗಾರ ಪಾಲನೇತ್ರ, ಅನ್ನಪೂರ್ಣ ಪಬ್ಲಿಕೇಷನ್ ಪ್ರಕಾಶಕರಾದ ಸುರೇಶ್ ಬಿಕೆ, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಿದ್ದು,ವಿದ್ಯಾರ್ಥಿಗಳು ಗಾಂಧಿಜೀಯವರ ಆದರ್ಶಗಳನ್ನು ಸ್ಮರಿಸಿದರು.