ಬೆಂಗಳೂರು, (www.thenewzmirror.com) ;
ಲೋಕಸಮರದ ಫಲಿತಾಂಶ ಹೊರಬಿದ್ದಿದೆ. ಘಟಾನುಘಟಿ ನಾಯಕರು ಸೋತಿದ್ದು, ಯಾರೂ ನಿರೀಕ್ಷೆ ಮಾಡದ ಅಭ್ಯರ್ಥಿಗಳು ದೆಹಲಿಗೆ ವಿಮಾನ ಹತ್ತೋಕೆ ಸಿದ್ಧವಾಗಿದ್ದಾರೆ. 543 ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಮೂಡಿಸಿದ್ದ ಕ್ಷೇತ್ರ ಅಂದ್ರೆ ಶಿವಮೊಗ್ಗ ಲೋಕಸಭಾ ಕ್ಷೇತ್ರ. ಯಾಕಂದ್ರೆ ರಕ್ತದ ಕಣ ಕಣದಲ್ಲೂ ಬಿಜೆಪಿ ಅಂತ ಹೇಳುತ್ತಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಬಂಡಾಯವಾಗಿ ಸ್ಪರ್ಧೆ ಮಾಡಿದ್ರು. ಅದರಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ನಿ ಹಾಗೂ ಮಾಜಿ ಸಿಎಂ ಪುತ್ರಿಯಾಗಿರುವ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರು.
ಬಿಜೆಪಿ ಮತಗಳು ವಿಭಜನೆ ಆಗ್ತಿವೆ. ಇದ್ರ ಲಾಭ ಆಗುತ್ತೆ ಅಂತ ಅಂದುಕೊಂಡಿದ್ದ ಕಾಂಗ್ರೆಸ್ ಗೆ ಮತದಾರರು ನಿರೀಕ್ಷಿತ ಪ್ರಮಾಣದಲ್ಲಿ ಮತ ಹಾಕಲಿಲ್ಲ. ಪರಿಣಾಮವಾಗಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಜಯಗಳಿಸಿದ್ದಾರೆ. ಎರಡನೇ ಸ್ಥಾನಕ್ಕೆ ಗೀತಾ ಶಿವರಾಜ್ ಕುಮಾರ್ ತೃಪ್ತಿ ಪಟ್ಟುಕೊಂಡಿದ್ದು, ಬಂಡಾಯ ಅಭ್ಯರ್ಥಿ ಈಶ್ವರಪ್ಪ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಫಲಿತಾಂಶ ಹೊರಬರ್ತಿದ್ದಂತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶಿವಮೊಗ್ಗ ಮತದಾರರಿಗೆ ಭಾವನಾತ್ಮಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಶಿವಮೊಗ್ಗದಲ್ಲಿ ಕಣಕ್ಕೆ ನಿಂತಿದ್ದ ಗೀತಾ ಸೋಲಾಗಿದೆ. ಈ ಬೆನ್ನಲ್ಲೇ, ನಟ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಎಂದಿನಂತೆ ಪ್ರಯತ್ನ ಮುಂದುವರಿಯಲಿದೆ ಎಂದು ಪತ್ನಿಯ ಸೋಲಿನ ಬಳಿಕ ನಟ ರಿಯಾಕ್ಟ್ ಮಾಡಿದ್ದಾರೆ.
ಧನ್ಯವಾದಗಳು.. ಫಲಿತಾಂಶಗಳು ನಮ್ಮ ಕಡೆಯಾಗದಿದ್ದರೂ ನಿಮ್ಮೂಂದಿಗಿನ ಈ ಪ್ರಯಾಣ ಮತ್ತು ನಮ್ಮ ಜನರ ಅಚಲವಾದ ಬೆಂಬಲಕ್ಕಾಗಿ ನಾವು ಸದಾ ಕೃತಜ್ಞರಾಗಿರುತ್ತೇವೆ. ಮತದಾರನ ನಿರ್ಣಯಕ್ಕೆ ತಲೆ ಬಾಗುತ್ತಾ, ನಾವು ಭವಿಷ್ಯದ ಬದಲಾವಣೆಗಾಗಿ ಪ್ರಯತ್ನಿಸುವುದನ್ನು ಎಂದಿನಂತೆಯೇ ಮುಂದುವರಿಸುತ್ತೇವೆ. ತಮ್ಮ ಅಚಲವಾದ ಬೆಂಬಲದೊಂದಿಗೆ ಪ್ರೋತ್ಸಾಹಿಸಿದ ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ವಿಶ್ವಾಸವನ್ನಿಟ್ಟು ಮತ ಹಾಕಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಶಿವಣ್ಣ ಪೋಸ್ಟ್ ಮಾಡಿದ್ದಾರೆ.