ನವದೆಹಲಿ(www.thenewzmirror.com): ಅಂಡಮಾನ್ ಸಮುದ್ರದಲ್ಲಿ ಆಯಿಲ್ ಇಂಡಿಯಾ ಲಿಮಿಟೆಡ್ (OIL) ಕಂಪನಿಯು ಕೈಗೊಂಡಿದ್ದ ಆಳ ಸಮುದ್ರದ ಪರಿಶೋಧನಾ ಯೋಜನೆಯಲ್ಲಿ ಭಾರಿ ಪ್ರಮಾಣದ ನೈಸರ್ಗಿಕ ಅನಿಲ ಪತ್ತೆಯಾಗಿದೆ. ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿ, 355 ಮೀಟರ್ ಆಳದ ಸಮುದ್ರದಲ್ಲಿ ಕೊರೆಯಲಾದ ‘ಶ್ರೀ ವಿಜಯಪುರಂ-3’ ಎಂಬ ಪರಿಶೋಧನಾ ಬಾವಿಯಲ್ಲಿ ಈ ಇಂಧನ ನಿಕ್ಷೇಪ ಪತ್ತೆಯಾಗಿದ್ದು, ದೇಶದ ಇಂಧನ ವಲಯದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲು ಎನ್ನಲಾಗಿದೆ.
ಈ ಬಾವಿಯಲ್ಲಿ 1,900 ಮೀಟರ್ಗಿಂತಲೂ ಹೆಚ್ಚಿನ ಆಳದಲ್ಲಿ ನಡೆಸಲಾದ ಆರಂಭಿಕ ಉತ್ಪಾದನಾ ಪರೀಕ್ಷೆಗಳ ವೇಳೆ ನಿರಂತರ ಜ್ವಾಲೆಯ (Continuous Flaring) ಮೂಲಕ ನೈಸರ್ಗಿಕ ಅನಿಲದ ಇರುವಿಕೆಯನ್ನು ದೃಢಪಡಿಸಿಕೊಳ್ಳಲಾಗಿದೆ. ಪ್ರಸ್ತುತ ಆಯಿಲ್ ಇಂಡಿಯಾ ಕಂಪನಿಯು ಈ ಅನಿಲದ ರಾಸಾಯನಿಕ ಸಂಯೋಜನೆ ಮತ್ತು ಕ್ಯಾಲೋರಿಫಿಕ್ ಮೌಲ್ಯವನ್ನು ನಿರ್ಣಯಿಸಲು ಗ್ಯಾಸ್ ಸ್ಯಾಂಪ್ಲಿಂಗ್ ಪ್ರಕ್ರಿಯೆಯನ್ನು ನಡೆಸುತ್ತಿದೆ. ಇದರೊಂದಿಗೆ ಈ ಗ್ಯಾಸ್ನ ಮೂಲವನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಐಸೊಟೋಪ್ ಅಧ್ಯಯನಗಳನ್ನೂ ಕೈಗೆತ್ತಿಕೊಳ್ಳಲಾಗಿದೆ. ಕಂಪನಿಯು ಅಂಡಮಾನ್ ಜಲಾನಯನ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಅಭಿಯಾನದ ಮೂರು ಪರಿಶೋಧನಾ ಬಾವಿಗಳಲ್ಲಿ ಈಗಾಗಲೇ ಎರಡು ಬಾವಿಗಳಲ್ಲಿ ಇಂಧನ ನಿಕ್ಷೇಪ ಇರುವುದು ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 2025ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಘೋಷಿಸಿದ್ದ ‘ಸಮುದ್ರ ಮಂಥನ್ ಮಿಷನ್’ (ರಾಷ್ಟ್ರೀಯ ಆಳ ಸಮುದ್ರ ಪರಿಶೋಧನಾ ಮಿಷನ್) ಅಡಿಯಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಭಾರತದ ಕಡಲಾಚೆಯ ಜಲಾನಯನ ಪ್ರದೇಶಗಳಲ್ಲಿರುವ ಹೈಡ್ರೋಕಾರ್ಬನ್ ನಿಕ್ಷೇಪಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಈ ಮಿಷನ್ ಅಡಿಯಲ್ಲಿ ಭಾರಿ ಸಂಖ್ಯೆಯ ಆಳ ಸಮುದ್ರ ಮತ್ತು ಅತಿ ಆಳದ ಸಮುದ್ರ ಪರಿಶೋಧನಾ ಬಾವಿಗಳನ್ನು ಕೊರೆಯಲು ಯೋಜಿಸಲಾಗಿದೆ. ಪ್ರಸ್ತುತ ಪತ್ತೆಯಾಗಿರುವ ನೈಸರ್ಗಿಕ ಅನಿಲ ನಿಕ್ಷೇಪವು ಪೆಟ್ರೋಬ್ರಾಸ್, ಟೋಟಲ್ ಎನರ್ಜೀಸ್, ಬಿಪಿ, ಶೆಲ್ ಮತ್ತು ಎಕ್ಸಾನ್ ಮೊಬಿಲ್ನಂತಹ ಜಾಗತಿಕ ಇಂಧನ ದೈತ್ಯರ ಸಹಯೋಗದೊಂದಿಗೆ ಭಾರತದ ಇಂಧನ ಸ್ವಾವಲಂಬನೆಯ ಗುರಿಯನ್ನು ಮತ್ತಷ್ಟು ವೇಗಗೊಳಿಸಲಿದೆ.







