ಬೆಂಗಳೂರು, (www.thenewzmirror com) ;
ಮೂಡ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ಕೊಟ್ಟ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಅಸಮಧಾನ ಹೊರಹಾಕುತ್ತಿದೆ. ಇದರ ಬೆನ್ನಲ್ಲೇ ರಾಜ್ಯವ್ಯಾಪ್ತಿ ಹೋರಾಟಕ್ಕೂ ಮುಂದಾಗಿದೆ. ಇದರ ಬೆನ್ನಲ್ಲೇ ರಾಜ್ಯದ ಪ್ರಭಾವಿ ನಾಯಕ ಸಾರಿಗೆ ಸಚಿವ ನಾನು ಸಿದ್ದರಾಮಯ್ಯ ಪರ ಅಂತ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ದೆ ಸಾಮಾಜಿಕ ಜಾಲತಾಣದಲ್ಲಿ ರಾಜ್ಯಪಾಲರ ನಡೆ ಪಕ್ಷಪಾತದಿಂದ ಕೂಡಿದೆ ಅಂತ ಉದಾಹರಣೆ ಸಮೇತ ಪೋಸ್ಟ್ ಮಾಡಿದ್ದಾರೆ.
ರಾಮಲಿಂಗಾರೆಡ್ಡಿ ಪೋಸ್ಟ್ ನಲ್ಲಿ ಏನಿದೆ.?
ರಾಜ್ಯಪಾಲರು ಯಾವುದೇ ಪೂರ್ವ ತನಿಖೆಗಳಿಲ್ಲದೇ, ಕ್ಷಣಾರ್ದದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತಹ ಮನಸ್ಸನ್ನು ಈ ಹಿಂದೆಯೇ ಮಾಡಿದ್ದರೆ ಕೆಲ ವರ್ಷಗಳಿಂದ ರಾಜಭವನದಲ್ಲಿ ಧೂಳು ಹಿಡಿದು ಕೂತಿರುವ ಬಿಜೆಪಿ ಮತ್ತು ಜೆಡಿ(ಎಸ್) ನಾಯಕರ ಕೆಲವು ಪ್ರಮುಖ ಹಗರಣಗಳ ಕಡತಗಳಿಗೂ ಮುಕ್ತಿ ದೊರೆಯುತ್ತಿತ್ತು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿಯವರ ವಿರುದ್ಧ ದೂರು ನೀಡಿದರೂ ರಾಜ್ಯಪಾಲರು ಯಾವುದೇ ಕ್ರಮಗಳನ್ನು ಇದುವರೆಗೆ ತೆಗೆದುಕೊಂಡಿಲ್ಲ.
ನವೆಂಬರ್ನಲ್ಲಿ ಹೆಚ್.ಡಿ. ಕುಮಾರಸ್ವಾಮಿಯವರ ಮೇಲೆ ಅನಧಿಕೃತ ಗಣಿಗಾರಿಕೆಗೆ ಪರವಾನಗಿ ನೀಡಿರುವ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತ ಅನುಮತಿ ಕೋರಿದ್ದರೂ ರಾಜ್ಯಪಾಲರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ.
ರಾಜಭವನ ಬಿಜೆಪಿ ಕಚೇರಿಯಾದ ಜಗನ್ನಾಥ ಭವನವಾಗಿ ಮಾರ್ಪಾಡಾಗಿದೆಯೇ ಎಂಬ ಸಂಶಯ ಮೂಡುತ್ತಿದೆ.
ತಮಿಳುನಾಡು, ಪ.ಬಂಗಾಳ, ಕೇರಳದ ರಾಜ್ಯಪಾಲರಂತೆ ಕರ್ನಾಟಕದ ರಾಜ್ಯಪಾಲರೂ ಬಿಜೆಪಿಯ ಹಿತಾಸಕ್ತಿಗಳಿಗೆ ಸ್ಪಂದಿಸುತ್ತಿರುವುದು ಅವರ ಸ್ಥಾನಕ್ಕೆ ಕಳಂಕವನ್ನುಂಟು ಮಾಡುತ್ತಿದೆ.
ಮುಡಾ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ, ನಿವೇಶನ ಹಂಚಿಕೆಯಾದಾಗ ಸಿದ್ದರಾಮಯ್ಯನವರು ಅಧಿಕಾರದಲ್ಲಿ ಇರಲಿಲ್ಲ, ಬದಲಾಗಿ ಬಿಜೆಪಿ ಅಧಿಕಾರದಲ್ಲಿ ಇತ್ತು. ಮುಡಾದಲ್ಲಿ 50-50 ಅನುಪಾತ ತಂದಿದ್ದು ಬಿಜೆಪಿ ಅಧಿಕಾರವಧಿಯಲ್ಲಿ.
ಸಿದ್ದರಾಮಯ್ಯನವರ ಪತ್ನಿ ಬದಲಿ ನಿವೇಶನವನ್ನು ಇದೇ ನಿಯಮದ ಅನುಸಾರ ಪಡೆದಿದ್ದಾರೆ.
ಇಷ್ಟೆಲ್ಲಾ ಪುರಾವೆಗಳಿದ್ದರೂ ಯಾವುದೇ ತಪ್ಪು ಮಾಡದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಪಟ್ಟು ಹಿಡಿದು ಕುಳಿತಿರುವ ಬಿಜೆಪಿಗರು ಹೆಣೆಯುತ್ತಿರುವ ರಾಜಕೀಯ ಷಡ್ಯಂತ್ರವಲ್ಲವೇ ಇದು?
ನಮ್ಮ ಜನಪರ ಸರ್ಕಾರವನ್ನು ಉರುಳಿಸಲು ಎನ್ಡಿಎ ಏನೆಲ್ಲಾ ಪ್ರಯತ್ನಗಳು ಸಾಧ್ಯವೋ ಅದನ್ನೆಲ್ಲಾ ಮಾಡುತ್ತಿದೆ.
ಶಾಸಕರನ್ನು ಖರೀದಿಸುವುದು, ಇಡಿ, ಐಟಿ, ಸಿಬಿಐ ತನಿಖೆಗಳನ್ನು ದಾಳವಾಗಿ ಉಪಯೋಗಿಸಿ, ಅದೂ ಫಲಿಸದಿದ್ದಾಗ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ಮೊರೆಹೋಗಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ದೊರಕಿರುವ 136 ಶಾಸಕರ ಬಲ ನಮ್ಮ ರಾಜ್ಯದ ಜನತೆಯ ನಂಬಿಕೆಯ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಫಲ.
ಹಾಗಾಗಿ ಎಷ್ಟೇ ಆಟಗಳನ್ನಾಡಿದರೂ ನಿಜವಾದ ಮೋಸಗಾರರು ಯಾರು ಎಂಬ ಸತ್ಯ ಇಂದಲ್ಲಾ ನಾಳೆ ಹೊರಬಂದೇ ಬರುತ್ತದೆ.
ನಾನು ಸೇರಿದಂತೆ ನಮ್ಮ ಇಡೀ ಸಂಪುಟ ಸಚಿವರು, ಶಾಸಕರು, ಪಕ್ಷದ ನಾಯಕರು ಹಾಗೂ ರಾಜ್ಯದ ಜನತೆ ಮುಖ್ಯಮಂತ್ರಿ ಜೊತೆಗೆ ನಿಂತಿದ್ದೇವೆ.
ಕಾನೂನುರೀತ್ಯಾ ಎಲ್ಲಾ ಹೋರಾಟಗಳು ಮುಂದುವರೆಯಲಿವೆ.
ಸತ್ಯಮೇವ ಜಯತೇ!
ಅಂತ ಪೋಸ್ಟ್ ಮಾಡಿದ್ದಾರೆ ಸಚಿವ ರಾಮಲಿಂಗಾರೆಡ್ಡಿ