ಬೆಂಗಳೂರು, (www.thenewzmirror.com) ;
ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಸ್ವತಃ ಸರ್ಕಾರನೇ ಊಹೆ ಮಾಡಿಕೊಳ್ಳೋಕೆ ಸಾಧ್ಯವಾಗದಷ್ಟರ ಮಟ್ಟಿಗೆ ನೀರಿನ ಹಾಹಾಕಾರ ಆರಂಭವಾಗಿದೆ. ಶತಾಯ ಗತಾಯ ನೀರಿನ ಸಮಸ್ಯೆ ಸಿಲಿಕಾನ್ ಸಿಟಿ ಮಂದಿಗೆ ಉಂಟಾಗದ ರೀತಿ ಪರ್ಯಾಯ ವ್ಯವಸ್ಥೆಗಳನ್ನ ಜಲಮಂಡಳಿ ಮಾಡುತ್ತಿದೆ. ಇದರ ಭಾಗವಾಗಿ ಒಂದಲ್ಲ ಒಂದು ಹೊಸ ಹೊಸ ಸುತ್ತೋಲೆ ಹೊರಡಿಸುವ ಕೆಲಸವನ್ನ BWSSB ಮಾಡುತ್ತಿದೆ. ಇದೆಲ್ಲದರ ನಡುವೆ ನಮ ಗೋಳೂ ಕೇಳಿ ಸ್ವಾಮಿ ಅಂತ BMTC ನೌಕರರು ಮನವಿ ಮಾಡುತ್ತಿದ್ದಾರೆ.
ಬಿಎಂಟಿಸಿ ಇತಿಹಾಸದಲ್ಲೇ ಮೊದಲ ಬಾರಿಗೆ ನೌಕರರು ನೀರಿನ ಸಮಸ್ಯೆ ಹಾಗೂ ತಾವು ಎದುರಿಸುತ್ತಿರುವ ಜೀವಜಲದ ಅಳಲನ್ನ ಇಂಚಿಂಚೂ ವ್ಯವಸ್ಥಾಪಕ ನಿರ್ದೇಶಕರಿಗೆ ಬಿಚ್ಚಿಡೋ ಪ್ರಯತ್ನ ಮಾಡಿದ್ದಾರೆ. ಬಿಎಂಟಿಸಿ ಎಂಡಿ(Managing Director) ಗೆ ಪತ್ರ ಬರೆದು ಬಿಎಂಟಿಸಿಯ ಪ್ರಮುಖ ನಗರಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಅಂತ ಪತ್ರ ಬರೆದಿದ್ದಾರೆ.
2024 ರ ಏಪ್ರಿಲ್ 8 ರಂದು ಸಮಗ್ರ ಸಾರಿಗೆ ಸಂಸ್ಥೆಯ ಸಿಬ್ಬಂದಿ ಪರವಾಗಿ ಯೋಗೇಶ್ ಗೌಡ ಬಿಎಂಟಿಸಿ ಎಂಡಿಗೆ ಪತ್ರ ಬರೆದು ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಿರುವ ನೌಕರರಿಗೆ ನೀರಿನ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಪ್ರಮುಖ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಅಂತ ಮನವಿ ಮಾಡಿದ್ದಾರೆ.
ಎಂಡಿಗೆ ಬರೆದ ಪತ್ರದ ಸಾರಂಶದಲ್ಲಿ ಪ್ರತಿನಿತ್ಯ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಚಾಲಕರು ಹಾಗೂ ನಿರ್ವಾಹಕರಿಗೆ ಸಂಚಾರ ದಟ್ಟಣಿ ಹಾಗೂ ಬಿಸಿಲಿನ ತಾಪಕ್ಕೆ ಕರ್ತವ್ಯ ನಿರ್ವಹಿಸೋದು ಕಷ್ಟವಾಗುತ್ತಿದೆ. ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಮನೆಯಿಂದ ಪ್ರತಿನಿತ್ಯ ತರುವ 4 ರಿಂದ 5 ಲೀಟರ್ ನೀರು ಸಾಕಾಗೋದಿಲ್ಲ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗೆನೇ ಶೌಚಾಲಯದಲ್ಲೂ ಸಮರ್ಪಕ ನೀರಿನ ವ್ಯವಸ್ಥೆ ಮಾಡಬೇಕಿದೆ. ನೀರಿನ ಸಮಸ್ಯೆ ಯಿಂದ ಮಹಿಳಾ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತಿದೆ. ಆದ ಕಾರಣ ತಾವುಗಳು ಕೂಡಲೇ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತಂದು ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.
ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ.?
ಬಿಎಂಟಿಸಿಯಲ್ಲಿ ಹತ್ರತ್ರ 51 ಡಿಪೋಗಳಿವೆ. ಇದರ ಜತೆಗೆ ನೂರಾರು ನಿಲ್ದಾಣಗಳಿವೆ. ಬಹುತೇಕ ನಿಲ್ದಾಣಗಳಲ್ಲಿ ಹಾಗೂ ರಾತ್ರಿ ಪಾಳಿಯಲ್ಲಿ ತಂಗುವ ಸ್ಥಳಗಳಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ. ಮೆಜೆಸ್ಟಿಕ್, ಕೆಂಗೇರಿ, ಕತ್ರಿಗುಪ್ಪೆ, ಕಾಳಿದಾಸ ಲೇಔಟ್ ಬಸ್ ನಿಲ್ದಾಣ, ಶ್ರೀನಗರ ಬಸ್ ನಿಲ್ದಾಣ, ಕಗ್ಗಲೀಪುರ, ನೆಲ್ಲಿಗೆರೆ ಸೇರಿದಂತೆ ಹಲವು ಕಡೆಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಹೀಗಾಗಿ ಬಹುತೇಕ ನೌಕರರು ರಾತ್ರಿ ಪಾಳೆಯದಲ್ಲಿ ನಾವು ಡ್ಯೂಟಿ ಮಾಡಲ್ಲ ಅಂತ ಹೇಳುತ್ತಿದ್ದಾರಂತೆ.
ಯೊಗೇಶ್ ಗೌಡ ಹೇಳುವುದು ಏನು.?
ಬೆಂಗಳೂರಿನಲ್ಲಿ ತಾಪಾಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಡ್ಯೂಟಿಗೆ ಬರುವಾಗ ಮನೆಯಿಂದ ನಾಲ್ಕರಿಂದ ಐದು ಲೀಟರ್ ನೀರು ತರ್ತೀವಿ. ಅದು ಸಾಕಾಗೋದಿಲ್ಲ. ಪ್ರಮುಖ ನಿಲ್ದಾಣಗಳಲ್ಲಿ ಕುಡಿಯೋಕೆ ನೀರೂ ಸಿಗುತ್ತಿಲ್ಲ. ಹಾಗೆನೇ ಮಹಿಳಾ ಸಿಬ್ಬಂದಿಗೆ ಶೌಚಾಲಯದಲ್ಲಿ ನೀರಿಲ್ಲದೆ ತುಂಬ ಕಷ್ಟ ಅನುಭವಿಸುತ್ತಿದ್ದಾರೆ. ಈ ಎಲ್ಲ ಸಂಕಷ್ಟಗಳನ್ನ ನಿಗಮದ ನೌಕರರ ಪರವಾಗಿ ಎಂಡಿಯವರ ಗಮನಕ್ಕೆ ತಂದಿದ್ದೇನೆ ಎಂದು ಹೇಳುತ್ತಾರೆ ಯೊಗೇಶ್ ಗೌಡ.
ಸಾರಿಗೆ ಸಚಿವರೇ ಸ್ವಲ್ಪ ಗಮನ ಹರಿಸಿ
ಇದು ಕೇವಲ ಬಿಎಂಟಿಸಿ ಮಾತ್ರವಲ್ಲ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಲ್ಲಿ ಇದೇ ಸಮಸ್ಯೆ ಇದೆ. ಚುನಾವಣಾ ಬ್ಯುಸಿಯಲ್ಲಿರೋ ಸಾರಿಗೆ ಸಚಿವರು ಕೊಂಚ ನೌಕರರ ಕಷ್ಟವನ್ನ ಆಲಿಸಬೇಕಿದೆ. ಅಷ್ಟೇ ಅಲ್ದೆ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಬೇಕಿದೆ.