ಬೆಂಗಳೂರು, (www.thenewzmirror.com);
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಶತಾಯಗತಾಯ ತಮಿಳುನಾಡಿನಲ್ಲಿ ಬಿಜೆಪಿ ಅರಳಿಸೋ ಪಣತೊಟ್ಟಂತೆ ಕಾಣುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಿದ್ದತೆ ಮಾಡಿಕೊಂಡಿರುವ ಅವರು, ವಿನೂತನ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ತಮಿಳುನಾಡಿನ ರಾಮೇಶ್ವರಂನಲ್ಲಿ ಬಿಜೆಪಿಯ 6 ತಿಂಗಳ ಸುದೀರ್ಘ ‘ಎನ್ ಮನ್, ಎನ್ ಮಕ್ಕಳ್’ (ನನ್ನ ಭೂಮಿ, ನನ್ನ ಜನರು) ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.
ಪಾದಯಾತ್ರೆ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಶಾ, ಈ ಯಾತ್ರೆ ತಮಿಳುನಾಡನ್ನು ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸುತ್ತದೆ ಮತ್ತು ರಾಷ್ಟ್ರದಾದ್ಯಂತ ತಮಿಳು ಸಂಸ್ಕೃತಿಗೆ ಹೆಚ್ಚಿನ ಮನ್ನಣೆಯನ್ನು ನೀಡುತ್ತದೆ ಎಂದು ಬಣ್ಣಿಸಿದರು.
ಇದು ಕೇವಲ ಒಂದು ರಾಜಕೀಯ ಪಾದಯಾತ್ರೆಯಲ್ಲ., ರಾಜ್ಯದ ಎಲ್ಲಾ 39 ಲೋಕಸಭಾ ಕ್ಷೇತ್ರಗಳು ಮತ್ತು 234 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಪಾದಯಾತ್ರೆ ಇದಾಗಿದ್ದು, ಜನವರಿ 11, 2024 ರಂದು ಕೊನೆಗೊಳ್ಳಲಿದೆ ಎಂದು ತಿಳಿಸಿದರ ಅವರು, ಇದೇ ವೇಳೆ ಪ್ರತಿಪಕ್ಷಗಳ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣಾ ಚಾಣಾಕ್ಯ ಎಂದೇ ಬಿಂಬಿತವಾಗಿರುವ ಅಮಿತ್ ಶಾರವರ ಎನ್ ಮನ್, ಎನ್ ಮಕ್ಕಳು ಪಾದಯಾತ್ರೆ 2024ರ ಚುನಾವಣೆ ಕಾವು ಹೆಚ್ಚಿಸಿರುವುದಂತೂ ಸುಳ್ಳಲ್ಲ. ಹಗಲಿರುಳು ದಣಿವರಿಯದೆ ದುಡಿಯುತ್ತಿರುವ ಶಾ, ಚುನಾವಣಾ ತಯಾರಿಯಲ್ಲಿ ತೋರುವ ಜಾಗರೂಕತೆ ಮತ್ತು ಸಮರ್ಪಣೆಯನ್ನು ಇಂದಿನ ಭಾರತದ ರಾಜಕೀಯದಲ್ಲಿ ಯಾವ ನಾಯಕರೂ ನಿರೀಕ್ಷಿಸುವುದು ಸಾಧ್ಯವಿಲ್ಲ.
ಬಿಜೆಪಿಯ ಮುಖ್ಯ ಚುನಾವಣಾ ತಂತ್ರಗಾರರಾಗಿ ಸೇವೆ ಸಲ್ಲಿಸುತ್ತಿರುವ ಅಮಿತ್ ಶಾ, ಸತತವಾಗಿ ಪಕ್ಷವನ್ನು ಯಶಸ್ಸಿನತ್ತ ಮುನ್ನಡೆಸಿದ್ದಾರೆ, ಇಂದು ಬಿಜೆಪಿ ಜಾಗತಿಕವಾಗಿ ಅತಿದೊಡ್ಡ ರಾಜಕೀಯ ಪಕ್ಷವಾಗಿದೆ. ಕಳೆದ 9 ವರ್ಷಗಳಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದೊಂದಿಗೆ, ಎನ್ಡಿಎ ಸರ್ಕಾರವು ಜಾತೀಯತೆ, ಕುಟುಂಬವಾದ, ತುಷ್ಟೀಕರಣ ಮತ್ತು ಪ್ರಾದೇಶಿಕತೆಗಳನ್ನು ತ್ಯಜಿಸಿ, ಕಾರ್ಯಕ್ಷಮತೆ ಮತ್ತು ದಕ್ಷತೆ ಆಧಾರಿತ ರಾಜಕೀಯಕ್ಕೆ ಆದ್ಯತೆ ನೀಡಿರುವುದನ್ನ ಇಲ್ಲಿ ಸ್ಮರಿಸಬಹುದು.
ಡಿಎಂಕೆ ದೇಶದ ಅತ್ಯಂತ ಭ್ರಷ್ಟ ರಾಜಕೀಯ ಪಕ್ಷವಾಗಿದ್ದು, ಅದರ ಸಚಿವರು ಬಹುಕೋಟಿ ಹಗರಣಗಳಲ್ಲಿ ಭಾಗಿಯಾಗಿ ಜೈಲು ಪಾಲಾದ ಆರೋಪ ಎದುರಿಸುತ್ತಿದ್ದಾರೆ. ಆದರೆ ಅವರಿನ್ನೂ ಸ್ಟಾಲಿನ್ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ಹೊಂದಿದ್ದಾರೆ ಎಂದು ಟೀಕಿಸಿದರು.
ಸ್ಟಾಲಿನ್ ಸರ್ಕಾರವು ಜೈಲಿನಲ್ಲಿರುವ ಸಚಿವರಿಂದ ಏಕೆ ರಾಜೀನಾಮೆ ಪಡೆಯುತ್ತಿಲ್ಲ ಎಂದು ತಮಿಳುನಾಡಿನ ಜನರು ಮತ್ತು ಇಡೀ ದೇಶದ ಜನರು ತಿಳಿದುಕೊಳ್ಳಲು ಬಯಸುತ್ತಾರೆ? ಸ್ಟಾಲಿನ್ ಅವರು ಚುನಾವಣೆಯಲ್ಲಿ ಗೆಲ್ಲಲು 500 ಕ್ಕೂ ಹೆಚ್ಚು ಭರವಸೆಗಳನ್ನು ನೀಡಿದ್ದರು, ಆದರೆ ಅವರು ಗೆದ್ದ ನಂತರ ಅವುಗಳಲ್ಲಿ ಒಂದನ್ನು ಸಹ ಈಡೇರಿಸಿಲ್ಲ. ಹಾಲಿ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸುವ ಬದಲು ಇಡೀ ತಮಿಳುನಾಡು ರಾಜ್ಯವನ್ನು ಮದ್ಯ, ಮಾದಕ ದ್ರವ್ಯ ಮತ್ತು ಗಾಂಜಾ ವ್ಯಾಪಾರದಲ್ಲಿ ಮುಳುಗಿಸಿದೆ ಎಂದು ಆರೋಪಿಸಿದರು.
ವಿರೋಧ ಪಕ್ಷದ ಮೈತ್ರಿಯ ಹೆಸರು ಬದಲಾದರೂ, ಮತ ಕೇಳಿದಾಗಲೆಲ್ಲ ಜನರು 2G ಹಗರಣ, ಕಾಮನ್ವೆಲ್ತ್ ಹಗರಣ, ಚಾಪರ್ ಹಗರಣ, ಜಲಾಂತರ್ಗಾಮಿ ಹಗರಣ, ಕಲ್ಲಿದ್ದಲು ಹಗರಣ, ಮತ್ತು ISRO ಹಗರಣಗಳನ್ನು ನೆನಪಿಸಿಕೊಳ್ಳುತ್ತಾರೆ ಎಂಬುದು ಶಾರವರ ಬಲವಾದ ನಂಬಿಕೆ. ವಿರೋಧ ಪಕ್ಷಗಳು ಭಾರತವನ್ನು ಅಭಿವೃದ್ಧಿಪಡಿಸಲು ಬಯಸುವುದಿಲ್ಲ, ಅವರು ತಮ್ಮ ಕುಟುಂಬದ ಅಭಿವೃದ್ಧಿಯನ್ನು ಬಯಸುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಬಯಸಿದ್ದಾರೆ. ಸ್ಟಾಲಿನ್ ತಮ್ಮ ಪುತ್ರ ಉದಯನಿಧಿಯನ್ನು ಸಿಎಂ ಮಾಡಲು ಬಯಸಿದ್ದಾರೆ. ಲಾಲು ಯಾದವ್ ತಮ್ಮ ಪುತ್ರ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಮಾಡಲು ಬಯಸಿದ್ದಾರೆ. ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಸಿಎಂ ಆಗಬೇಕೆಂದು ಬಯಸಿದರೆ, ಉದ್ಧವ್ ಠಾಕ್ರೆ ಅವರು ತಮ್ಮ ಮಗ ಸಿಎಂ ಆಗಬೇಕೆಂದು ಬಯಸುತ್ತಿದ್ದಾರೆ. ಈ ಜನರು ಭಾರತವನ್ನು ಬಲಿಷ್ಠಗೊಳಿಸಲು ಬಯಸುವುದಿಲ್ಲ, ಆದರೆ ತಮ್ಮ ಪುತ್ರರು, ಪುತ್ರಿಯರು ಮತ್ತು ಸೋದರಳಿಯರನ್ನು ಸಬಲೀಕರಣಗೊಳಿಸಲು ಬಯಸುತ್ತಾರೆ ಎಂದು ವ್ಯಂಗ್ಯವಾಡಿದರು.
ಸ್ವಾತಂತ್ರ್ಯದ ನಂತರ, 370 ನೇ ವಿಧಿ ಮತ್ತು ರಾಮಮಂದಿರದಂತಹ ವಿಷಯಗಳ ಬಗ್ಗೆ ಕಾಂಗ್ರೆಸ್ ಧೋರಣೆಯು ಯಾವಾಗಲೂ ನಕಾರಾತ್ಮಕವಾಗಿಯೇ ಇದೆ. ಕಾಂಗ್ರೆಸ್ ಆಡಳಿತದಲ್ಲಿ ಶ್ರೀಲಂಕಾದಲ್ಲಿ ನಡೆದ ತಮಿಳರ ಹತ್ಯಾಕಾಂಡ ಮತ್ತು ಅವರ ಕಾಲದಲ್ಲಿಯೇ ತಮಿಳು ಮೀನುಗಾರರ ಪಟ್ಟ ಪಾಡನ್ನು ತಮಿಳುನಾಡಿನ ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆದರೆ ಮೋದಿಯವರ ಎರಡನೇ ಅವಧಿಯಲ್ಲಿ, ಅಮಿತ್ ಶಾರ ನಿರ್ದೇಶನದ ಮೇರೆಗೆ, 370 ನೇ ವಿಧಿಯನ್ನು ರದ್ದುಗೊಳಿಸಲಾಯಿತು ಮತ್ತು ರಾಮ ಮಂದಿರದ ಸಮಸ್ಯೆಯನ್ನು ಸಹ ಪರಿಹರಿಸಲಾಯಿತು. ದೇಶದ ಜನತೆ ಈ ಪರಿವರ್ತನೆಯ ಅಲೆಗೆ ಸಾಕ್ಷಿಯಾಗಿದ್ದಾರೆ.