ಬೆಂಗಳೂರು(www.thenewzmirror.com): ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಅನಾವರಣ ಕಾರ್ಯಕ್ರಮದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಉದಯೋನ್ಮುಖ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ವಿಶೇಷವೆಂದರೆ, ದ್ರಾವಿಡ್ ಅವರು ಈ ವೇಳೆ ಸಂಪೂರ್ಣವಾಗಿ ಕನ್ನಡದಲ್ಲೇ ಮಾತನಾಡಿ ನೆರೆದಿದ್ದವರ ಗಮನ ಸೆಳೆದರು.
ಸಚಿನ್ ತೆಂಡೂಲ್ಕರ್ ಯುಗದ ನೆನಪು:
ವೈಭವ್ ಅವರ ಅಪ್ರತಿಮ ಬ್ಯಾಟಿಂಗ್ ಶೈಲಿಯನ್ನು ಕೊಂಡಾಡಿದ ದ್ರಾವಿಡ್, ಕ್ರಿಕೆಟ್ ಜಗತ್ತಿನ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ನೆನಪಿಸಿಕೊಂಡರು. “ಸಚಿನ್ ತೆಂಡೂಲ್ಕರ್ ಅವರು ಕೇವಲ 16ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಅದ್ಭುತ ಇತಿಹಾಸ ಸೃಷ್ಟಿಸಿದ್ದರು. ಸಚಿನ್ ಅವರ ಆ ಯುಗದ ಬಳಿಕ, ಅಂದರೆ ಸುಮಾರು 40 ವರ್ಷಗಳ ನಂತರ ಕೇವಲ 15 ವರ್ಷದ ವಯಸ್ಸಿನಲ್ಲೇ ಇಂತಹ ಅಸಾಧಾರಣ ಪ್ರತಿಭೆಯನ್ನು ನಾವು ವೈಭವ್ ರೂಪದಲ್ಲಿ ನೋಡುತ್ತಿದ್ದೇವೆ. ಇದು ನಿಜಕ್ಕೂ ಒಂದು ತಲೆಮಾರಿಗೆ ಒಮ್ಮೆ ಮಾತ್ರ ಸಿಗುವಂತಹ ಅದ್ಭುತ (Once in a generation) ಪ್ರತಿಭೆ” ಎಂದು ಕನ್ನಡದಲ್ಲೇ ವಿಶ್ಲೇಷಿಸಿದರು.
ಯುವ ಆಟಗಾರರ ಮೇಲೆ ಒತ್ತಡ ಬೇಡ:
ಇದೇ ವೇಳೆ ಯುವ ಕ್ರಿಕೆಟಿಗರ ರಕ್ಷಣೆಗೂ ನಿಂತ ದ್ರಾವಿಡ್, “ವೈಭವ್ ಒಬ್ಬ ವಿಶಿಷ್ಟ ಮತ್ತು ಜನ್ಮಜಾತ ಪ್ರತಿಭೆಯುಳ್ಳ ಆಟಗಾರ. ಆತನ ಅಸಾಧಾರಣ ಬೆಳವಣಿಗೆಯನ್ನು ನೋಡಿ, ಉದಯೋನ್ಮುಖವಾಗಿ ಬರುವ ಪ್ರತಿಯೊಬ್ಬ ಸಾಮಾನ್ಯ ಯುವ ಆಟಗಾರನನ್ನು ಆತನೊಂದಿಗೆ ಹೋಲಿಸಿ ಅನಗತ್ಯ ಒತ್ತಡ ಹೇರಬೇಡಿ” ಎಂದು ಕಿವಿಮಾತು ಹೇಳಿದರು.
ವಿಶ್ವದರ್ಜೆಯ ಬೌಲರ್ಗಳಲ್ಲೇ ಚರ್ಚೆ:
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ವೈಭವ್ ಆಟವನ್ನು ಹತ್ತಿರದಿಂದ ಗಮನಿಸಿದ್ದ ಮಾಜಿ ತರಬೇತುದಾರ ದ್ರಾವಿಡ್, “ವಿಶ್ವದರ್ಜೆಯ ಹಿರಿಯ ಬೌಲರ್ಗಳು ಸಹ ಟೀಮ್ ಮೀಟಿಂಗ್ಗಳಲ್ಲಿ ಈ 15 ವರ್ಷದ ಬಾಲಕನ ಬ್ಯಾಟಿಂಗ್ ಅನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆಯೇ ಗಂಟೆಗಟ್ಟಲೆ ಚರ್ಚೆ ನಡೆಸುವಂತೆ ವೈಭವ್ ತನ್ನ ಆಟದ ಪ್ರಭಾವ ಬೀರಿದ್ದಾನೆ” ಎಂದು ಹೆಮ್ಮೆಯಿಂದ ನುಡಿದರು.







