ನವದೆಹಲಿ(www.thenewzmirror.com):ರಾಜ್ಯಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಭಾರತೀಯ ಜನತಾ ಪಾರ್ಟಿ (BJP) ಮತ್ತೊಮ್ಮೆ ತನ್ನ ಸಾಂಪ್ರದಾಯಿಕ ‘ಸರ್ಪ್ರೈಸ್’ ಶೈಲಿಯನ್ನು ಮುಂದುವರಿಸಿದೆ. ಪ್ರಭಾವಿ ನಾಯಕರ ಹೆಸರುಗಳು ಮುಂಚೂಣಿಯಲ್ಲಿದ್ದರೂ, ಎಲ್ಲ ಊಹಾಪೋಹಗಳನ್ನು ಬದಿಗೊತ್ತಿ ಹೈಕಮಾಂಡ್ ತಳಮಟ್ಟದ ನಾಯಕನಿಗೆ ಮಣೆ ಹಾಕಿದೆ. ಈ ನಿರ್ಧಾರದಿಂದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಸಂಸತ್ತಿನ ಮೇಲ್ಮನೆ ಪ್ರವೇಶಿಸುವ ದೊಡ್ಡ ಅವಕಾಶ ಕೈತಪ್ಪಿದಂತಾಗಿದೆ.
ದೇವೇಗೌಡರ ದೆಹಲಿ ಇನ್ನಿಂಗ್ಸ್ಗೆ ಬ್ರೇಕ್: ಮೈತ್ರಿಕೂಟದ ಬೆಂಬಲದೊಂದಿಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರನ್ನು ಮತ್ತೊಮ್ಮೆ ರಾಜ್ಯಸಭೆಗೆ ಕಳುಹಿಸಬಹುದು ಎಂಬ ಲೆಕ್ಕಾಚಾರ ಮೈತ್ರಿ ವಲಯದಲ್ಲಿತ್ತು. ಆದರೆ ಬಿಜೆಪಿ ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಈ ಸಾಧ್ಯತೆಗೆ ಸಂಪೂರ್ಣ ಬ್ರೇಕ್ ಹಾಕಿದೆ.
ಸುಮಲತಾ ಅಂಬರೀಶ್ಗೆ ನಿರಾಸೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಮೈತ್ರಿಗಾಗಿ ತ್ಯಾಗ ಮಾಡಿದ್ದ ಸುಮಲತಾ ಅವರಿಗೆ ಈ ಬಾರಿ ರಾಜ್ಯಸಭೆ ಅಥವಾ ವಿಧಾನ ಪರಿಷತ್ ಟಿಕೆಟ್ ಸಿಗಲಿದೆ ಎಂಬ ಭಾರಿ ನಿರೀಕ್ಷೆಯಿತ್ತು. ಆದರೆ ಹೈಕಮಾಂಡ್ನ ಅಂತಿಮ ಪಟ್ಟಿಯಲ್ಲಿ ಅವರಿಗೆ ಸ್ಥಾನ ಸಿಗದೆ ತೀವ್ರ ಹಿನ್ನಡೆಯಾಗಿದೆ.
ಯಾರಿಗೆ ಒಲಿದಿದೆ ಅದೃಷ್ಟ?
ದೊಡ್ಡ ನಾಯಕರನ್ನು ಹಿಂದಿಕ್ಕಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡಿರುವುದು ಹುಬ್ಬಳ್ಳಿ-ಧಾರವಾಡ ಭಾಗದ ಹಿಂದುಳಿದ ವರ್ಗದ (OBC) ಹಿರಿಯ ನಾಯಕ ಪ್ರೊ. ಎಂ. ನಾಗರಾಜ. ಇವರು ಯಾವುದೇ ದೊಡ್ಡ ರಾಜಕೀಯ ಹಿನ್ನೆಲೆ ಹೊಂದಿಲ್ಲದಿದ್ದರೂ, ಆರ್ಎಸ್ಎಸ್, ಎಬಿವಿಪಿ ಮತ್ತು ಸಂಘಟನೆಯಲ್ಲಿ ದಶಕಗಳಿಂದ ಪ್ರಾಮಾಣಿಕವಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಒಬಿಸಿ ಮತಬ್ಯಾಂಕ್ ಬಲಪಡಿಸುವ ದೃಷ್ಟಿಯಿಂದ ಹೈಕಮಾಂಡ್ ಈ ಸರ್ಪ್ರೈಸ್ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.







