ಬೆಂಗಳೂರು(www.thenewzmirror.com): “ಪಕ್ಷದ ವರಿಷ್ಠರ ಮೇಲೆ ನನಗೆ ಸಂಪೂರ್ಣ ಭರವಸೆಯಿದೆ. ಹೈಕಮಾಂಡ್ ನಾಯಕರು ಇಂದು ಸಂಜೆಯೊಳಗೆ ಸೂಕ್ತ ನಿರ್ಧಾರ ಪ್ರಕಟಿಸುವ ವಿಶ್ವಾಸವಿದ್ದು, ಅಲ್ಲಿಯವರೆಗೆ ನಾನು ಕಾಯುತ್ತೇನೆ,” ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮತ್ತು ಪಕ್ಷದ ರಾಜ್ಯ ಉಸ್ತುವಾರಿಗಳು ಈಗಾಗಲೇ ತಮ್ಮೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ ಎಂದು ನೆನಪಿಸಿಕೊಂಡರು. “ನನ್ನ ರಾಜೀನಾಮೆಯನ್ನು ಅಂಗೀಕರಿಸದಂತೆ ಮುಖ್ಯಮಂತ್ರಿಗಳು ವರಿಷ್ಠರಿಗೆ ಮನವಿ ಮಾಡಿದ್ದಾರೆ. ನಾನು ನನ್ನ ಅಸಮಾಧಾನದ ಹಿಂದಿರುವ ನೈಜ ಕಾರಣಗಳನ್ನು ಮತ್ತು ನನಗೆ ನೀಡಲಾಗಿದ್ದ ಭರವಸೆಗಳ ಬಗ್ಗೆ ಹಿರಿಯ ನಾಯಕರ ಮುಂದೆ ಮುಕ್ತವಾಗಿ ಹೇಳಿಕೊಂಡಿದ್ದೇನೆ,” ಎಂದರು.
ಸಂಜೆ ನಿರ್ಧಾರ ಪ್ರಕಟ:
“ನಾನು ಪಕ್ಷದ ಶಿಸ್ತಿನ ಸಿಪಾಯಿ. ಆದರೆ, ರಾಜಕೀಯದಲ್ಲಿ ಗೌರವ ಮತ್ತು ನಂಬಿಕೆ ಮುಖ್ಯವಾಗುತ್ತದೆ. ಉಸ್ತುವಾರಿಗಳು ಪ್ರಸ್ತುತ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದು, ಇಂದು ಸಂಜೆಯೊಳಗೆ ಈ ಗೊಂದಲಕ್ಕೆ ಒಂದು ತಾರ್ಕಿಕ ಅಂತ್ಯ ಸಿಗುವ ನಿರೀಕ್ಷೆಯಿದೆ. ವರಿಷ್ಠರು ತೆಗೆದುಕೊಳ್ಳುವ ಅಂತಿಮ ತೀರ್ಮಾನವನ್ನು ನೋಡಿಕೊಂಡು ನಾನು ನನ್ನ ಮುಂದಿನ ಹೆಜ್ಜೆಯನ್ನು ಇಡಲಿದ್ದೇನೆ,” ಎಂದು ರೆಡ್ಡಿ ಅವರು ಮಾರ್ಮಿಕವಾಗಿ ನುಡಿದರು.







