ಬೆಂಗಳೂರು,(www.thenewzmirror.com) ;
ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾಗಿದೆ. ಮೋದಿ ಜತೆಗೆ ಮೊದಲ ಹಂತದಲ್ಲಿ ಎಪ್ಪತ್ತೊಂದು ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದೂ ಆಗಿದೆ. ಆದರೆ ಇಷ್ಟೆಲ್ಲಾ ಅದ್ಧೂರಿ ಕಾರ್ಯಕ್ರಮದಲ್ಲಿ ಒಂದು ಪ್ರಶ್ನೆ ತುಂಬಾ ಜನರನ್ನ ಕಾಡುತ್ತಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಂಸತ್ ಭವನ ಪ್ರವೇಶಿಸಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಅತ್ಯದ್ಭುತ ಕಾರ್ಯಕ್ರಮದಲ್ಲಿ ಹೆಚ್ ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಮಗ ನಿಖಿಲ್ ಕುಮಾರಸ್ವಾಮಿ ಕುಟುಂಬ ಹಾಜರಿತ್ತು. ಆದ್ರೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮಾತ್ರ ಕಾರ್ಯಕ್ರಮದ ವೇದಿಕೆಯಲ್ಲಿ ಕಾಣಿಸಲಿಲ್ಲ. ಹೀಗಿರಬೇಕಾದರೆ ಮಗನ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಯಾಕೆ ಬರಲಿಲ್ಲ, ಏನಾದರೂ ಮುನಿಸು ಇದ್ಯಾ ಎನ್ನುವ ಹತ್ತು ಹಲವು ಪ್ರಶ್ನೆಗಳು ಉದ್ಭವಿಸೋದು ಸಹಜ.
ಈ ಎಲ್ಲ ಊಹಾಪೋಹಗಳಿಗೆ ಸ್ವತಃ ಮಾಜಿ ಪ್ರಧಾನಿಯೇ ತೆರೆ ಎಳೆದಿದ್ದು, ಪ್ರಧಾನಿ ಮೋದಿ ಅವರಿಗೆ ತಾವು ಗೈರಾಗಲು ಕಾರಣ ಕುರಿತಂತೆ ಸುದೀರ್ಘ ಪತ್ರವೊಂದನ್ನ ಬರೆದಿದ್ದಾರೆ. ಮೋದಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸೋ ಮೂಲಕ ಜವಾಹರಲಾಲ್ ನೆಹರು ಅವರ ದಾಖಲೆ ಬ್ರೇಕ್ ಮಾಡಿದ್ದ ಆ ಕಾರ್ಯಕ್ರಮಕ್ಕೆ ಭಾಗವಹಿಸದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು, ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ಧಾರೆ.
ಮಾಜಿ ಪ್ರಧಾನಿ ಪತ್ರದ ಸಾರಾಂಶ
ಪ್ರಧಾನಿ ಮೋದಿ ಅವರೇ…,
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಸರ್ಕಾರಕ್ಕೆ ತಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ. ಈ ಲೋಕಸಭಾ ಚುನಾವಣೆಯು ಕುತೂಹಲಕಾರಿ ಫಲಿತಾಂಶ ನೀಡಿದ್ದು, ದೇಶದ ಪ್ರಜಾಪ್ರಭುತ್ವದ ಕಂಪನ್ನು ಸಾಬೀತುಪಡಿಸಿದೆ. ಪ್ರಜಾಸೋದಿತ್ತಾತ್ಮಕ ಪ್ರಕ್ರಿಯೆಗಳನ್ನು ಅಪಖ್ಯಾತಿಗೊಳಿಸಲು ಕಾಂಗ್ರೆಸ್ನ ಕೊಳಕು ಪ್ರಚಾರವನ್ನು ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಬಹಿರಂಗಪಡಿಸುತ್ತದೆ. ದೇಶದ ಜನರು ಅವರ ದುರಹಂಕಾರಕ್ಕೆ ಪಾಠ ಕಲಿಸಿದ್ದಾರೆಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಟೀಕಿಸಿದ್ದಾರೆ. ಇಂದಿನ ಪ್ರಮಾಣವಚನ ಸ್ವೀಕಾರ ಸಮಾರಂಭದ ಭಾಗವಾಗಲು ನಾನು ಇಷ್ಟಪಡುತ್ತಿದ್ದೇನೆ. ಆದರೆ, ನನ್ನ ಆರೋಗ್ಯವು ದೆಹಲಿ ಪ್ರಯಾಣಿಸಲು ನನಗೆ ಅವಕಾಶ ನೀಡುತ್ತಿಲ್ಲ. ಆದರೂ, ನಿಮ್ಮ ಆತ್ಮೀಯ ಆಹ್ವಾನಕ್ಕಾಗಿ ತುಂಬಾ ಧನ್ಯವಾದಗಳು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಸರಕಾರಕ್ಕೆ ನನ್ನ ಪಕ್ಷವಾದ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ. ಇನ್ನೂ ಸಂಪುಟದಲ್ಲಿ ಜೆಡಿಎಸ್ ಗೆ ಕೇಂದ್ರ ಸಚಿವ ಸಂಪುಟ ದರ್ಜೆ ಸ್ಥಾನ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ದೇವೇಗೌಡ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯಂತೆ ನಿಮ್ಮ ಕಾರ್ಯಸೂಚಿಯನ್ನು ಜನತೆಗೆ ತಲುಪಿಸಲು ಸಹಾಯ ಮಾಡುತ್ತೇವೆ. ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಮೋದಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.